ವೀರಶೈವ ಲಿಂಗಾಯತ ಧರ್ಮದ ಕುರಿತಾಗಿ
20 ವರ್ಷದ ಹಿಂದಿನ
ದಿ|| ಮಹದೇವ್ ಬಣಕಾರ್ ಅವರ
ಭಾಷಣವನ್ನು ಸಾಂದರ್ಭಿಕವಾಗಿ
ಇಂದು ಬಿಡುಗಡೆ ಮಾಡುತಿದ್ದೇವೆ
Biography of Dr.Mahadev Banakar
ನಾಡು-ನುಡಿಯ ಹೋರಾಟಗಾರ, ಕವಿ, ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿಯಾದ ಮಹದೇವ ಬಣಕಾರರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರಿನಲ್ಲಿ (ಈಗ ಹಾವೇರಿ ಜಿಲ್ಲೆ) 1932ರ ಅಕ್ಟೋಬರ್ 03ರಂದು ತಂದೆ ಗದಿಗೆಪ್ಪ, ತಾಯಿ ಸಿದ್ದಮ್ಮ. ಮೋಟೆಬೆನ್ನೂರಿನ ವಿಶೇಷತೆ ಎಂದರೆ ಸ್ವಾತಂತ್ರಯೋಧ, ಕ್ರಾಂತಿಕಾರಿ ಮೈಲಾರಮಹದೇವ ಹಾಗೂ ಮಹದೇವ ಬಣಕಾರರಿಗೆ ಜನ್ಮ ಕೊಟ್ಟ ಸ್ಥಳ.
ಕಿತ್ತು ಕಿನ್ನುವ ಬಡತನ, ಓದಬೇಕೆಂದರೂ ಸೌಲಭ್ಯದ ಕೊರತೆಯಿಂದ ಹೈಸ್ಕೂಲು ಮೆಟ್ಟಿಲು ಹತ್ತಿದ್ದೇ ಜಾಸ್ತಿ. ಶಿಕ್ಷಣವನ್ನು ಮುಂದುವರೆಸಲಾಗದೆ ತಂದೆ ತಾಯಿಗಳಿಗೆ ಸಹಾಯಕನಾಗಿ ಗೃಹಕೃತ್ಯದಲ್ಲಿ ಭಾಗಿಯಾಗಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದು ಎಮ್ಮೆ ಕಾಯುವ ಕೆಲಸ. ಎಮ್ಮೆಯ ಮೇಲೆ ಕುಳಿತು ಲಹರಿ ಬರೆದು ಕಟ್ಟಿದ ಹಾಡು ಕವನ ರೂಪದಲ್ಲಿ, ವಚನರೂಪದಲ್ಲಿ ಹೊರಹೊಮ್ಮಿದಾಗ 18ರ ಹರೆಯದಲ್ಲಿಯೇ ಪ್ರಕಟಿಸಿದ ಕವನ ಸಂಕಲ ‘ಕಾವೋದ್ಯಯ’ ಈ ಸಂಕಲನಕ್ಕೆ ಸಾಲಿ ರಾಮಚಂದ್ರರಾಯರು ಮುನ್ನುಡಿ ಬರೆದು ಹಾರೈಸಿದರು.
ಹೀಗೆ ಇವರು ಬರೆದ ಹಾಡು, ಕವನಗಳಿಗೆ ಸ್ಪೂರ್ತಿದಾಯಕರೆಂದರೆ ಗುರುಗಳಾಗಿದ್ದ ಸಾಲಿ ರಾಮಚಂದ್ರರಾಯರು ಹಾಗೂ ಕುವೆಂಪುರವರು.
ಇವರ ಕಾವ್ಯಕೃಷಿಗೆ ನೀರೆರೆದು ಬೆಳೆಸಿದ ಮತ್ತೊಬ್ಬರೆಂದರೆ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಚಾರ್ಯ ಮಹಾಸ್ವಾಮಿಗಳು ನನ್ನ ಸಂಕಲ್ಪ ಶಕ್ತಿ, ರಚನಾಶಕ್ತಿ, ಕಾವ್ಯಶಕ್ತಿಗಳಿಗೆಲ್ಲ ಸ್ವಾಮಿಗಳ ಆರ್ಶಿರ್ವಾದವೇ ಶ್ರೀರಕ್ಷೆ ಎಂದು ನಮ್ರವಾಗಿ ನುಡಿಯುವ ಬಣಕಾರರು ‘ಕಾಡುಗಲ್ಲಿಗೆ ಉಳಿ ಏಟು ನೀಡಿ ಕರೆದು ವಿಗ್ರಹ ಮಾಡಿದ ಆರಾಧ್ಯಮೂರ್ತಿ’ ಎಂದು ಸ್ಮರಿಸಿಕೊಂಡಿದ್ದಾರೆ.
ಬಣಕಾರರು ಪ್ರತಿಕೋದ್ಯಮಿಯಾಗಿಯೂ ಆರಂಭದಲ್ಲಿ ನವಯುಗ, ಜಯಕರ್ನಾಟಕ, ಪ್ರಜಾವಾಣಿ, ಕರ್ನಾಟಕ ಬಂಧು, ಕನ್ನಡಿಗ, ಜಯಂತಿ, ಅಂಕುಶ ಮುಂತಾದ ಪತ್ರಿಕೆಗಳ ಸಹ ಸಂಪಾದಕರಾಗಿಯೂ ದುಡಿದು ವಿಪುಲ ಅನುಭವ ಪಡೆದರು. ದಾವಣಗೆರೆಗೆ ಬಂದು ‘ಜಾಗೃತಿ’ ಎಂಬ ಹೊಸ ಪತ್ರಿಕೆಯನ್ನು ಪ್ರಾರಂಭಿಸದರಾದರೂ ಅದಕ್ಕೆ ನಿರೀಕ್ಷಿಸಿದ ಉತ್ತೇಜನ ದೊರೆಯದೆ ನಿಲ್ಲಿಸಬೇಕಾಯಿತು.
ಬಣಕಾರರು ಸೃಜನಶೀಲ ಸಾಹಿತಿ, ಕವಿ ಹಾಗೂ ನಾಟಕರಾರರು, ಕಾವ್ಯೋದಯವಲ್ಲದೆ ಬಣ್ಣದ ಕಾರಂಜಿ, ಹೊಸಹುಟ್ಟು ಮುಂತಾದ 4 ಕಾವ್ಯ ಕೃತಿಗಳು ಗರತಿಯ ಗೋಳು, ಕಲ್ಯಾಣಕ್ರಾಂತಿ, ಯಾರು ಹೊಣೆ, ಉರಿಲಿಂಗ ಪೆದ್ದಿ, ತಿಂದೋಡಿ, ತೂಗಿದ ತೊಟ್ಟಿಲು, ಹೊಸ್ತಿಲುದಾಡಿದ ಹೆಣ್ಣು, ದುಡ್ಡೇ ದೇವರು ಮೊದಲಾದ ನಾಟಕಗಳು, ಲೋಕದ ಕಣ್ಣು, ಮಾದನ ಮಗ ಮತ್ತು ಇತರೆ ಕಥೆಗಳು ಮುಂತಾದ ಕಥಾ ಸಂಕಲನಗಳು, ಭಾಷೆ ಮತ್ತು ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ-ಮಹಾರಾಷ್ಟ್ರ ಮಹಾಜನ್ ವರದಿ ವಿಶ್ಲೇಷಣೆ, ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗದು, ಕಾಸರಗೋಡು ಕೇರಳಕ್ಕೆ ಉಳಿಯದು, ಭಾರತದಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆ (ಇಂಗ್ಲಿಷ್ನಲ್ಲೂ ಕೂಡಾ) ಕರ್ನಾಟಕ ಉಜ್ವಲ ಪರಂಪರ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಇವರ ಮೇರು ಕೃತಿ ಎಂದರೆ 1104 ವಚನಗಳ ‘ಮಹದೇವ ಬಣಕಾರರ ವಚನಗಳ’ ‘ವಿಶ್ವಬಂಧು ಮರುಳ ಸಿದ್ದ’ ಮತ್ತು ‘ಶ್ರೀ ಶಿವಕುಮಾರ ಚರಿತೆ’ 12ನೆಯ ಶತಮಾನದ ಬಸವಾದಿ ಶಿವಶರಣ ವಚನಗಳಿಗೆ ಸರಿಸಾಟಿಯಾಗಿದ್ದು ಭಾಮಿನಿ ಷಟ್ಟದಿಯಲ್ಲಿ ರಚಿತವಾಗಿರುವ ಶ್ರೀಮರಳ ಸಿದ್ದ ಕಾವ್ಯವು ಈ ಶತಮಾನದ ಮಾಹಾಕಾವ್ಯವೆಂದೇ ಪರಿಗಣಿಸಲ್ಪಟ್ಟಿದೆ.
ಇವರ ಅದ್ಬುತ ಪ್ರತಿಭೆ ಮತ್ತು ಸಾಹಿತ್ಯ ಪ್ರವೃತ್ತಿಗೆ ಸಾಕ್ಷಿಯಾಗಿರುವ ಮತ್ತೊಂದು ಮಹೋನ್ನತಿ ಕೃತಿ ಪುಟಗಳ ಬೃಹತ್ ಗ್ರಂಥ ‘ಅಂಗ್ಲರ ಆಡಳಿತದಲ್ಲಿ ಕನ್ನಡ’ ಯಾವೊಂದು ಸಂಸ್ಥೆ. ವಿಶ್ವವಿದ್ಯಾಲಯದ ಸಹಾಯವೋ ಇಲ್ಲದೆ, ಇಚ್ಚಾಶಕ್ತಿಯಿದ್ದಲ್ಲಿ ಅಡತಡೆಯೂ ಬಾರದೆನ್ನುವಂತೆ ಏಕಾಂಗಿಯಾಗಿ ಸಾಧಿಸಬಹುದೆನ್ನುವುದನ್ನು ನಿರೂಪಿಸಿರುವ ಕೃತಿ. ಈ ಸಂಶೋಧನ ಕೃತಿಗೆ ಎಷ್ಟು ಕೃತಜ್ಷತೆ ಅರ್ಪಿಸಿದರೂ ಸಾಲದು ಎಂದು ಸಂಶೋಧಕರಾದ ಶಂಬಾ ಜೋಶಿ ಮತ್ತು ಅಂಕಣಕಾರರಾದ ಹಾ.ಮಾ.ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಮಾರು 40ಕ್ಕೂ ಹೆಚ್ಚು ಕೃತಿ ರಚಿಸಿರುವ ಬಣಕಾರರ ಕೆಲ ಕೃತಿಗಳು ವಿಶ್ವವಿದ್ಯಾಲಯಗಳ ಪಠ್ಯವಾಗಿಯೂ ಆಯ್ಕೆಯಾಗಿವೆ.
ಸಾಹಿತ್ಯ ಕೃತಿಗಳ ರಚನೆಗಷ್ಟೇ ತಮ್ಮನ್ನು ಸೀಮಿತಿಗೊಳಿಸಿಕೊಳ್ಳದ ಬಣಕಾರರು ಕರ್ನಾಟಕದ ಏಕೀಕರಣಕ್ಕಾಗಿ 14-15ನೆಯ ವಯಸ್ಸಿನಲ್ಲಿಯೇ ಮೈಸೂರು ಚಲೋ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದರು. ಕನ್ನಡ ನಾಡು-ನುಡಿ, ಗಡಿ-ನೆಲ-ಜಲ ಸಂರಕ್ಷಣೆಯ ವಿಷಯ ಬಂದಾಗಲ್ಲೆಲ್ಲ ಚಳವಳಿಗಳಲ್ಲಿ ಚಳವಳಿಗಳಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿದ್ದಲ್ಲದೆ ಬೆಳಗಾವಿ, ಕಾಸರಗೋಡು, ತಾಳವಾಡಿ ಫಿರ್ಕಾ, ಪಾವಗಡ, ಮಧುಗಿರಿ ನಿಪ್ಪಾಣಿ ಮುಂತಾದ ಗಡಿ ಭಾಗಗಳಲ್ಲೆಲ್ಲಾ ಸಂಚರಿಸಿ ಗಡಿಭಾಗದ ಸಮಸ್ಯೆಯನ್ನು ಆಳವಾಗಿ ಅಭ್ಯಸಿಸಿ ಕನ್ನಡದ ನೆಲಸ ಸಂರಕ್ಷಣೆಗಾಗಿ ಸತತ ಹೋರಾಟ ನಡೆಸಿದ್ದಾರೆ. ಕನ್ನಡ ಕಾವಲು ಮತ್ತು ಗಡಿ ಸಲಹಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅದ್ಬುತ ವಾಕ್ಪಟುತ್ವ, ಶ್ರೇಷ್ಠವಾಗ್ಮಿಗಳಾಗಿದ್ದ ಬಣಕಾರರು ಪಂಡಿತ-ಪಾಮರಿಬ್ಬರಿಗೂ ರಚಿಸುವಂತೆ ಸಂದರ್ಭೋಚಿತವಾಗಿ ಲೀಲಾಜಾಲವಾಗಿ ತಮ್ಮ ಮಾತಿನ ಮೋಡಿಯಿಂದ ಕೇಳುಗರನ್ನು ಸೆರೆಹಿಡಿಯಬಲ್ಲ ಚತುರತೆಯನ್ನು ಹೊಂದಿದ್ದರು, ಸಾಹಿತ್ಯಸೃಷ್ಟಿ, ಮಾತುಗಾರಿಕೆ ಎರಡೂ ಇವರಿಗೆ ದೈವದತ್ತವಾಗಿ ಸಿದ್ದಿಸಿದ ಕಲೆಯಾಗಿತ್ತು. ಬರವಣಿಗೆಯಲ್ಲಿ ಉಪಯೋಗಿಸುತ್ತಿದ್ದ ಲಾಲಿತ್ಯದ ಗುಣಗಳನ್ನೇ ಮಾತುಗಾರಿಕೆಯಲ್ಲಿ ತರುವುದರಲ್ಲಿಯೂ ನಿಸ್ಸೀಮರಾಗಿದ್ದರು.
ಇವರ ಈ ಮಾತುಗಾರಿಕೆಯೇ ರಾಜಕೀಯ ರಂಗಕ್ಕೂ ಎಳೆದು ತಂದಿತ್ತು. ಸಿರಿಗೆರೆಯ ಜಗದ್ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಾತ್ಮಗುರುಗಳಾದರೆ, ರಾಜಕೀಯ ಗುರುಗಳು ಪಾಟೀಲ ಪುಟ್ಟಪ್ಪನವರು. ನಾಡು-ನುಡಿ ರಕ್ಷಣೆ, ಗಡಿಸಮಸ್ಯೆ, ಭಾಷಾಸಮಸ್ಯೆ ಮುಂತಾದವುಗಳ ಬಗ್ಗೆ ತಮ್ಮ ವಾದವನ್ನು ಮಂಡಿಸಲು ರಾಜಕೀಯ ಕ್ಷೇತ್ರವನ್ನು ಆರಿಸಿಕೊಂಡು 1967ರಲ್ಲಿ ಧಾರವಾಡದ ಬ್ಯಾಡಗಿ ಕ್ಷೇತ್ರದಿಂದ ವಿಧಾನ ಸಭೆಗೆ ಆರಿಸಿ ಬಂದುದಲ್ಲದೆ 1995ರಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿಯೂ ನೇಮಕಗೊಂಡಿದ್ದರು. ಬ್ಯಾಡಗಿ ಮೆಣಸಿನ ಖಾರದಂತೆ ಬಣಕಾರರ ಖಾರದ ಮಾತೆಂದರೆ ಅದೊಂದು ತೀರ್ಮಾನಿಸಿದ ವಾಕ್ಯದಂತೆ.
ಸಾಹಿತ್ಯ, ರಾಜಕೀಯ, ದೇಶ-ಭಾಷೆಗಳ ಕಾಳಜಿ ಹೊಂದಿದ ಬಣಕಾರರಿಗೆ ಚೊಚ್ಚಲ ಕೃತಿಯಾದ ಕಾವ್ಯೋದಯಕ್ಕೆ ಮಂಬಯಿ ಸರ್ಕಾರದ ಬಹುಮಾನ, ತಮ್ಮಣ್ಣರಾವ ಅಮ್ಮಿನಭಾವಿ ಸ್ಮಾರಕಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1986), ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (1999) ಮುಂತಾದ ಪ್ರಶಸ್ತಿಗಳು ಲಭಿಸಿದ್ದು ಹೋರಾಟದ ಬದುಕಿನಿಂದ ದೂರವಾದದ್ದು 2001ರ ರಾಜ್ಯೋತ್ಸವ ತಿಂಗಳಿನ 17ರಂದು.